ಜಿ ವಿ ಅತ್ರಿಯ ನೆನಪಿನಲ್ಲಿ...


ಗಣೇಶ ವಿಜಯ್ ಕುಮಾರ್ ಅತ್ರಿ ಎನ್ನುವ ಹೆಸರನ್ನು ಕೇಳಿದವರು ಅಷ್ಟೊಂದು ಇರಲಿಕ್ಕಿಲ್ಲ. ಆದರೆ ಅದೇ ಹೆಸರನ್ನೇ ಚಿಕ್ಕದಾಗಿ 'ಜಿ ವಿ ಅತ್ರಿ' ಅಂದ ತಕ್ಷಣ ಕನ್ನಡ ನಾಡಿನ ಸಂಗೀತ ಪ್ರೇಮಿಗಳ ಕಣ್ಮುಂದೆ ಎತ್ತರದ ನಿಲುವಿನ, ಹೊಳೆಯುವ ಕಂಗಳ,  ನಗುಮುಖದ ಆ ಯುವಕನ ಚಿತ್ರ ಹಾದು ಹೋಗುತ್ತದೆ.  ಅತ್ರಿಯವರ ಮಧುರ ಕಂಠದಿಂದ ಮೂಡಿಬಂದ ಹಾಡುಗಳೆಷ್ಟೋ ಕಿವಿಯಲ್ಲಿ ಅನುರಣನಗೊಳ್ಳುತ್ತವೆ.
      1964ರ ಮೇ 21ರಂದು ಜನಿಸಿದ ಅತ್ರಿ ಈಗ ನಮ್ಮೊಡನೆ ಇದ್ದಿದ್ದರೆ 53 ವರ್ಷದವರಾಗಿರುತ್ತಿದ್ದರು.  ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿಹೊಂದಿದ್ದ ಅತ್ರಿ ಸಂಗೀತ ಕ್ಷೇತ್ರದಲ್ಲಿ ಮಿಂಚಿನಂತೆ ಬಂದು ಮರೆಯಾಗಿ ಹೋದವರು.  2000ನೇ ಇಸವಿಯ ಎಪ್ರಿಲ್ 30ರಂದು ಶೃಂಗೇರಿಯಲ್ಲಿ ತುಂಗಾ ನದಿಯಲ್ಲಿ ಸ್ನಾನಮಾಡುವಾಗ ನಡೆದ ದುರಂತದಲ್ಲಿ ಅತ್ರಿ ಪತ್ನಿ ಹಾಗೂ ಪುತ್ರ ಸೇರಿದಂತೆ  ಕುಟುಂಬದ ಐದು ಜನ ಸದಸ್ಯರೊಂದಿಗೆ ಮುಳುಗಿ ಅಸುನೀಗಿದರು. ಈ ದುರಂತ ಸಂಭವಿಸುವಾಗ ಅವರಿಗಿನ್ನೂ 36ರ ಎಳೆ ವಯಸ್ಸು.  ಆದರೆ ಆ ಹೊತ್ತಿಗಾಗಲೇ ಅತ್ರಿಯವರ 200ಕ್ಕೂ ಹೆಚ್ಚು  ಆಡಿಯೋ ಕೆಸೆಟ್ಗಳು ಬಿಡುಗಡೆಯಾಗಿದ್ದವೆಂದರೆ ಅವರು ಅದಿನ್ನೆಂತಹ ಪ್ರತಿಭೆಯಾಗಿದ್ದರು! ಸಂಗೀತ ಜಗತ್ತಿಗಾದ ನಷ್ಟ ಅದಿನ್ನೆಂತದ್ದು!!
  ಬೆಂಗಳೂರಿನ ಶೇಷಾದ್ರಿ ಗವಾಯಿಯವರಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಅಭ್ಯಸಿಸಿದ್ದ ಅತ್ರಿ ಸುಗಮ ಸಂಗೀತದ ಕ್ಷೇತ್ರದ ಕಡೆ ವಿಶೇಷ ಗಮನ ಹರಿಸಿದ್ದರು. ತಮ್ಮ ಧ್ವನಿಯಿಂದಾಗಿ ' ಪಿ ಬಿ ಎಸ್ ಅವರ ಮಾನಸ ಪುತ್ರ ' ಎಂದೇ ಪ್ರಸಿದ್ದರಾಗಿದ್ದ ಅವರು ಕೆಲವು ಚಲನ ಚಿತ್ರಗಳಿಗೂ ಹಿನ್ನೆಲೆ ಗಾಯಕರಾಗಿ ಹಾಡಿದ್ದರು. ಗಾಯಕರಾಗಿಯಷ್ಟೇ ಅಲ್ಲದೆ  ಸಂಗೀತ ಸಂಯೋಜಕರಾಗಿಯೂ ಅತ್ರಿ ತಮ್ಮ ಗುರುತನ್ನು ಮೂಡಿಸಿದ್ದಾರೆ.  ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರು ಹಾಡಿದ ಹಾಡುಗಳ 'ಕರುನಾಡ ಕಂಪು' ಧ್ವನಿ ಸುರುಳಿಗೆ ರಾಗಸಂಯೋಜನೆ ನೀಡಿದವರೂ ಅತ್ರಿಯವರೇ. ಭಕ್ತಿಗೀತೆ, ಭಾವಗೀತೆ, ಜನಪದಗೀತೆ, ದಾಸರಪದಗಳು, ದೇಶಭಕ್ತಿಗೀತೆ ಹೀಗೆ ಹಲವು ಪ್ರಕಾರಗಳ ಹಾಡುಗಳಿಗೆ  ಜೀವ ತು0ಬಿದ್ದ ಅತ್ರಿ ತಮ್ಮದೇ ಆದ ' ಸಂಗೀತಗಂಗಾ' ಸಂಸ್ಥೆಯ ಮೂಲಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದರು. ಒಳ್ಳೆಯ ಲೇಖಕರೂ ಆಗಿದ್ದ ಅತ್ರಿಯವರ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ದೂರದರ್ಶನದಲ್ಲಿ ಪ್ರಸಾರವಾದ  ಟಿ ಎನ್ ಸೀತಾರಾಮ್ ಅವರ ' ಮಾಯಾಮೃಗ' ಧಾರಾವಾಹಿಯಲ್ಲೂ ಅತ್ರಿ ಅಭಿನಯಿಸಿದ್ದಾರೆ.

    ಅದ್ಭುತ ಪ್ರತಿಭೆ ಅತ್ರಿಯವರನ್ನು ಕೊಟ್ಟ ದೇವರು ಅವರಿಗೆ ಆಯಸ್ಸು ಕೊಡಲು ಮಾತ್ರ ಮರೆತುಬಿಟ್ಟ. ಅವರದೇ ದನಿಯಲ್ಲಿ ' ಮೋಸ ಹೋದೆನಲ್ಲ ಸಕಲವು ವಾಸುದೇವ ಬಲ್ಲ' ಎನ್ನುವ ದಾಸರ ರಚನೆಯನ್ನು ಕೇಳುವಾಗ ಹೃದಯ ಭಾರವಾಗುತ್ತದೆ, ಕಣ್ಣುಗಳು ತೇವವಾಗುತ್ತವೆ.

ಅತ್ರಿಯವರು ಹಾಡಿದ ಕೆಲವು ಕಾಡುವ ಹಾಡುಗಳು:
* ಏಳೆನ್ನ ಮನದನ್ನೇ ಏಳೂ ಮುದ್ದಿನ ಕನ್ನೆ
* ಪ್ರಕೃತಿಯಂತೆ ಕವಿಯ ಮನಸು ವಿಫುಲ ರೂಪ ಧಾರಿಣೀ
* ಹಾಡು ಹಳೆಯದಾದರೇನು ಭಾವ ನವನವೀನ
* ಮರೆಯಬೇಡ ಮನವೆ ನೀನು ಹರಿಯ ಸ್ಮರಣೆಯ
* ಮೂಡಲ್ ಕುಣಿಗಲ್ ಕೆರೇ
* ಉತ್ತಮರ ಸಂಗ ಎನಗಿತ್ತು ಸಲಹೋ
* ಅಂಬಿಗ ನಾ ನಿನ್ನ ನಂಬಿದೇ
* ಎಲ್ಲೋ ದೂರದಿ ಜಿನುಗುವ ಹನಿಗಳೇ
* ಹೊನ್ನು ತಾ ಗುಬ್ಬೀ ಹೊನ್ನು ತಾ...............................................................................

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು ಬಿದ್ದೊಡನೆ (ಕಥೆ )

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?