ಪೋಸ್ಟ್‌ಗಳು

ಪ್ರವಾಹ ನದಿಯಲ್ಲ. ...

ಸೊಕ್ಕಿನಲಿ  ಉತ್ಕಂಟ ಕಿರುಚಾಟ ಮಾಡುತ್ತ ಮೈ ತುಂಬಿ ಮುನ್ನಡೆದು ಶರವೇಗದಿಂದುರುಳಿ ಪಥದಿ ಸಿಕ್ಕೆಲ್ಲವನು ದಯೆಯಿಲ್ಲದೆಳೆದೊಯ್ದು ಪ್ರತಿಯೊಬ್ಬರೆದೆಯಲ್ಲು ಭಯ ಭೀತಿಗಳ ಬಿತ್ತಿ ಸಾಗುವ ಪ್ರವಾಹ ನದಿಯಲ್ಲ.... ಈಗ ಅಳಿದೇನೆಂಬ ಅರಿವೆಯೇ ಇಲ್ಲದೆ ಅಳಿಸುತ್ತಿರುವೆ ಎಂಬ ಕಲ್ಪನೆಯು ಇಲ್ಲದೆ ಒಡಲಲ್ಲಿ ಕಸಕಡ್ಡಿ ವ್ಯರ್ಥವನೆ ಒಯ್ಯುತ್ತ ವಿನಾಶಕ್ಕಿಂತ ಹೆಚ್ಚೇನು ಸಾಧಿಸದೆ ಸಾಗುವ ಪ್ರವಾಹ ನದಿಯಲ್ಲ.... ತನ್ನನ್ನೆ ಆಧರಿಸಿ ತನ್ನನ್ನೆ ಸತ್ಕರಿಸಿ ತನ್ನನ್ನೆ ನಂಬಿ ಕನಸುಳ ಕಟ್ಟಿ ಬಾಳ್ವೆಯಲಿ ಸಾಗಿರುವ ಜನರ ಕಣ್ಣುಗಳಲ್ಲಿ ಶೋಕ ವಿಷಾದ ಸಂಕಟವ ತುಂಬುತ್ತ ಸಾಗುವ ಪ್ರವಾಹ ನದಿಯಲ್ಲ. ... ಜೀವ ಜಲವನು ನೀಡಿ ಜೀವಿ ಸಂಕುಲಕೆಲ್ಲ ತನ್ನ ಪಾತ್ರವನೆಲ್ಲ ಫಲಪೂರ್ಣ ಮಾಡಿ ಕೊನೆ ಸೇರುವಲ್ಲಿ ಧನ್ಯತೆಯ ತಳೆಯುವ ಶಾಂತ ನದಿ ಕ್ಷಣಕಾಲ ಉನ್ಮತ್ತವಾಗಿ ಸಾಗುವ ಪ್ರವಾಹ ನದಿಯಲ್ಲ. ...

ಹೆಣಗಾಟ...

ಸುತ್ತಮುತ್ತಲು ದಟ್ಟ ಕತ್ತಲು ಮೌನ ತಬ್ಬಿದೆ ಇರುಳನು ಜೀರಿಡುವ ಜೀರುಂಡೆ ಕರ್ಕಶ ಕೊಯ್ಯುತಿದೆ ಮೌನದ ಕೊರಳನು ಅಜ್ಞಾತವಾಗಿಹ ಕದವ ತೆರೆದು ಮನದೊಳಗೆ ಕೋಲಾಹಲ ಮರೆತೆ ಹೋದ ನೆನಪುಗಳಿಗೆ ಹೊರಬಂದು ಕಾಡುವ ಹಂಬಲ ಭಯವ ಬಿತ್ತಿ ನನ್ನ ಎದೆಯ ನಡುಕ ನೋಡಲು ಏಕೆ ಕಾತುರ? ಕಾಣೆಯಾದ ಹಳೆಯ ಕ್ಷಣಗಳ ಕಣ್ಮುಂದೆ ತರುವಿರಿ ಏತಕೀತರ? ನನ್ನೆದೆಯ ಒಳಗೆ ದೀಪ ಹಚ್ಚಿ ಬೆಳಕ ತರಲು ಹೆಣಗುತಿರುವೆ ಕತ್ತಲೆಯ ಹೊಮ್ಮಿಸಿ ನನ್ನ ಈ ತರ ಸಂಕಟಕೆ ಎಳೆವುದು ನಿಮಗೆ ತರವೇ?

ಚಿಗುರಿದಾಗ. ...

ನೀನು ಹೇಳಲೆ ಇಲ್ಲ ನಾನು ಕೇಳಲೆ ಇಲ್ಲ ಆದರೂ ಚಿಗುರಿಹುದು ಈ ಪ್ರೀತಿಯು ಅದು ನಿನಗು ತಿಳಿದಿಹುದು ನನಗದರ ಅರಿವಿಹುದು ನೋಡೆಂತ ವೈಚಿತ್ರ್ಯ ಈ ರೀತಿಯು. ಮಾತುಗಳು ಇದ್ದರೂ ಇದರ ಸುದ್ದಿಯೆ ಇಲ್ಲ ಏನೇನೋ ಮಾತಾಡಿ ಹೊತ್ತು ಕಳೆದ್ಹೋಯ್ತು. ಅರ್ಥವಿಲ್ಲದ ಮಾತ ಹಿಂದಿರುವ ಗೂಢಾರ್ಥ ಪ್ರೀತಿಯೆಂಬ ವಿಷಯ ತಾನೆ ಅರಿವಾಯ್ತು. ಮನಸ ಈ ಭಾವನೆಗೆ ಪದಗಳೇತಕೆ ಹೇಳು ಮೌನವೆ ಎಲ್ಲವನು ಹೇಳುತಿರುವಾಗ ನಿನ್ನ ಹೃದಯದ ನುಡಿಯು ನನ್ನ ಹೃದಯವ ತಾಕಿ ಕುಶಲ ಸಂಭಾಷಣೆಯ ಮಾಡುತಿರುವಾಗ ಭಾವನೆಯ ಕಂಡು ನೀ ಭಯಪಡುವುದೇತಕ್ಕೆ ಅದು ದಿವ್ಯ, ಅದು ರಮ್ಯ ಇರಲಿ ಬಿಡು ಹಾಗೆ. ಇಂದಿನ ಚಿಗುರು ನಾಳೆ ಮರವಾದಾಗ ಕೀಳಲಾಗದು ಅದನು ಸುಲಭದಲಿ ಹೀಗೆ ನಾವು ಪೋಷಿಸಬೇಕು ಅದು ಮರವಾಗುವಂತೆ ಆಮೇಲೆ ಅದು ಅಮರವಾಗುವಂತೆ

ಮತ್ತೆ ಪರಿತಾಪವೊಂದೇ......

ಹೊತ್ತು ಮುಳುಗುವ ಮುನ್ನ ಮಾಡಿಬಿಡು ಕೆಲಸಗಳ ಇಲ್ಲದಿದ್ದರೆ ಮತ್ತೆ ಅವಕಾಶ ಸಿಗದು ತಂದೆ ತಾಯ್ಗಳ ಸೇವೆ ಇಂದೆ ನೀ ಮಾಡು ನಾಳೆ ನಿನಗಾ ಭಾಗ್ಯ ಸಿಗುವ ಭರವಸೆಯಿಲ್ಲ. ಗರ್ಭದಲಿ ನೀನಿರುವೆ ಎಂದು ತಿಳಿದಾ ಕ್ಷಣವೆ ಮುಡಿಪಿಟ್ಟರು ತಮ್ಮ ಬಾಳು ನಿನಗಾಗಿ ಅವರ ಮನಸು ಹಾಗು ಹಲವು ಕನಸುಗಳೆಲ್ಲ ನಿನ್ನ ಏಳಿಗೆಗಾಗಿ, ನಿನ್ನ ಜೀವಿತಕಾಗಿ ನೂರು ಸಾಲದ ಹೊರೆಯು ನಿನ್ನ ಶಿಕ್ಷಣಕಾಗಿ ಬಾಗಿ ಬೇಡಿತು ಕೈಯಿ ನಿನ್ನ ರಕ್ಷಣೆಗಾಗಿ ಗಡಿಬಿಡಿಯ ನಡುವೆ ನೀ ನೆನೆ ಅದನು ಕ್ಷಣ ಹೊತ್ತು ತುಂಬಿ ಬಂದರೆ ಹೃದಯ ಚೆನ್ನಾಯ್ತು ಗೆಳೆಯ ನಿನ್ನ ಬಾಲ್ಯದ ಆಟ, ಜೊತೆಗೆ ಎಷ್ಟೊಂದು ಹಠ! ಪ್ರೀತಿಯಲಿ ಸಹಿಸಿದರು ಅವರು ಅದನೆಲ್ಲ ನಿನ್ನ ಬೇಡಿಕೆಗಳು ಅವರ ಕೈಗೆಟುಕದಿರೆ ಅವರ ಕಣ್ಣೀರು ನಿನಗೆ ಕಾಣಲೆ ಇಲ್ಲ ಇಂದು ನೀ ನಿಂತಿರುವೆ ನಿನ್ನ ಕಾಲ್ಗಳ ಮೇಲೆ ಅವರ ಕಾಲ್ಗಳ ನೋಡು ಎಷ್ಟು ಬಲಹೀನ ಗೊಡ್ಡು ಜೀವಗಳೆಂದು ದೂರ ತಳ್ಳಲು ಬೇಡ ಅವರ ಆ ವೃದ್ದಾಪ್ಯ ನಾಳೆ ನಿನಗೂ ಇಹುದು ಕಣ್ಣು ಕಾಣುವುದಿಲ್ಲ, ಕಿವಿಯು ಕೇಳುವುದಿಲ್ಲ ಜರ್ಜರಿತ, ನಿಶ್ಯಕ್ತ,ಸೊರಗಿರುವ ದೇಹ ಕೈಸಾಗದಾ ಹೊತ್ತು, ಜೀರ್ಣವಾಗದು ತುತ್ತು ಇದ ನೋಡಿ ನೋಡದಂತಿರಬೇಡ ನೀನು ಮುದಿತನದಿ ಬಯಸುವರು ನಿನ್ನ ಆಸರೆಯನ್ನು ಮನದಲ್ಲೆ ಗೊಣಗೊಣಗಿ ಕುದಿಯಬೇಡ ನಿನ್ನ ಜೀವನ ಅವರು ನಿನಗೆ ಕೊಟ್ಟಿರುವ ವರ ನಿನಗೆ ಶಾಪವೆ ಹೌದು ಅವರ ಕಣ್ಣೀರು ಕೈ ಹಿಡಿದು ನಡೆಸು, ಕಾಲ್ಮುಟ್ಟಿ ನಮಿಸು ಅವರ ಸೇವೆಯ ಭಾಗ್ಯ ನಿನಗೆ ದೊ

ಮನವಿ ನಿನಗೆ......

ಇಮೇಜ್
ಮನದಲಿ ಸ್ವಲ್ವವೆ ಸುಳಿದಾಡು ಹೃದಯದಿ ಸ್ವಲ್ಪವೆ ನಲಿದಾಡು ಮನಸಿನ, ಹೃದಯದ ಸ್ಪಂದನೆಯಿಂದ ನಾ ಪಡೆಯುವೆ ಅಮಿತಾನಂದ ನೀ ಬರಲೇಬೇಕೆನ್ನುವ ಕಾತರ ಎಂದಿಗೆ ಬಂದೀಯೆನ್ನುವ ಆತುರ ಕಾದರು ಬಾರದೆ ಕಾಡುವುದೇತಕೆ? ದೂರದಲೆಲ್ಲೋ ಇರುವುದು ಏತಕೆ? ನಿನ್ನ ಪ್ರವಾಹದ ಧಾರೆಯ ನದಿಗಳು ನನ್ನೊಳು ಉದಯಿಸಿ ನನ್ನನೆ ತೋಯಿಸಿ ಮರುಕ್ಷಣ ಮುಳುಗಿಸಿ ಗಗನಕೆ ಚಿಮ್ಮಿಸಿ ರಮಿಸುವ ಅವುಗಳೇ ಹೋನ್ನಿನ ದಿನಗಳು ಅಂದಿನ ದಿನಗಳ ಇಂದಿನ ನೆನಪು ಇಂದಿನ ದಿನದವೇ ಆಗುವುದೇ? ಅಂದಿನ ಅವುಗಳು ಇಂದೂ ಆದರೆ ಇಂದಿನ ಈ ಕ್ಷಣ ಹೊನ್ನಾಗದೇ?

ಕರುಣೆಸುಧೆ..

ಇಮೇಜ್
ಕಾಯವಳಿದು ಹೋದರೇನು ಖ್ಯಾತಿಯಳಿಯದು ಕರುಣೆ ಸುಧೆಯ ಕಡಲಿಗಿರುವ ಒರತೆ ಬತ್ತದು ಕಂಡರೆಷ್ಟೋ ಜನರು ಅಂದು ತಮ್ಮ ಕಣ್ಣಲೆ ಮರುಕದಿಂದ ತೋರಿದಂತ ಮಹಿಮೆ ಹಲವನು ಮಿಂದರೆಷ್ಟೋ ಜನರು ಆನಂದ ಕಡಲಲೆ ಪಡೆದ ಕ್ಷಣವೆ ದಿವ್ಯವಾದ ಪರಮಕೃಪೆಯನು ತನುವು ಮನವು ತಲುಪದಂತ ಗಮ್ಯವಾವುದೋ ಅದರ ಮೂಲ ತಲುಪಿ ನೀನು ಸರ್ವವ್ಯಾಪಿಯು ಧನವು ತಪವು ಒಂದುಗೂಡಿ ಸಾಗುತಿರುವುದು ಭಕ್ತ ಜನರ ಬೇಗೆ ತಡೆವ ಧರ್ಮ ಕಾರ್ಯವು ಅಂದು ಇಂದು ಎಂದೆಂದಿಗೂ ಒಂದೆತರದಲಿ ಸ್ವಾನಂದದ ಅಮೃತವನ್ನು ಪಾನ ಮಾಡುತ ಶರಣು ಎಂದು ಬಂದ ಜನರ ಕರುಣೆಯಿಂದಲಿ ಕೃಪೆಯ ತೋರಿ ಮೈಯದಡವಿ ಪೊರೆವೆ ಸಂತತ ಶೃತಿಯು ಸ್ಮತಿಯು ಸಾರಿ ನುಡಿವ ನುಡಿಗಳೆಲ್ಲವು ನಿನ್ನದೆಂಬ ಮಾತು ನೀನು ನುಡಿದು ತಿಳಿದೆನು ಕೈಯ ಮುಗಿವೆ ನಿನಗೆ ನಾನು ಶರಣು ಎನ್ನುತ ನಿತ್ಯ ಸತ್ಯ  ನೀನು ಎಂಬದೆನ್ನ ಹೃದ್ಗತ. ಸದ್ಗುರು ಭಗವಾನ್ ಶ್ರೀಧರಸ್ವಾಮಿಗಳು, ವರದಹಳ್ಳಿ

ನಮ್ಮ ಶಾಸ್ತ್ರೀಜಿ. ...

ಇಮೇಜ್
ವಾಮನ ಶರೀರದಲಿ ಅಪರಿಮಿತ ಧೀರ ಭಾರತದ ವರಪುತ್ರ ಲಾಲ ಬಹದ್ದೂರ. ಸರಳತೆಯೆ ಉಸಿರಾಗಿ, ಸಜ್ಜನಿಕೆ ಹೆಸರಾಗಿ ಜನರ ಮನಮಂದಿರದಿ ನೆಲೆ ನಿಂತೆ ನೀನು ವೈಭೋಗವಿಲ್ಲದಿಹ ತ್ಯಾಗ ಜೀವನದಲ್ಲಿ ವೈಭವದಿ ಮೆರೆದಂತ ನಿಜಯೋಗಿ ನೀನು ಪೀಚು ಪೀಚಾಗಿರುವ ನೀನೆಂತ ವ್ಯಕ್ತಿ? ಮೈತಳೆದು ಬಂದಿರುವ ನಿಜ ದೇಶ ಭಕ್ತಿ! ಹೊರಗಣ್ಣಿನಲಿ ನೀನು ತುಂಬ ನಿಃಶಕ್ತ ಅಂತರಂಗದಲೆಂಥ ಅಪರಿಮಿತ ಶಕ್ತ! ನಿನ್ನ ಕಾಯವ ನೋಡಿ,ಮನದಿ ಕುಹಕವ ಮಾಡಿ ನಿನ್ನ ವಿನಯವ ನೋಡಿ, ಆಡಿಕೊಂಡರು ಕೂಡಿ ಮುಟ್ಟಿಕೊಳಬೇಕಾಯ್ತವರು ತಮ್ಮನ್ನೆ ತಾವು ಅರಿತುಕೊಂಡರು ಕೊನೆಗೆ ಮಂದಮತಿಗಳಾಗಿಹೆವು. ದೌರ್ಭಾಗ್ಯ ನಮ್ಮಯ ಹೆಗಲೇರಿ ಬಂತು ಆ ದಿನವೆ ತಾಷ್ಕೆಂಟಿನಲಿ ಸಹಿಯು ಬಿತ್ತು ಏನಾಯ್ತು? ಯಾಕಾಯ್ತು? ಗೊತ್ತಾಗದಂತೆ ಆ ರಾತ್ರಿ ನೀ ತೊರೆದೆ ಈ ಜಗದ ಸಂತೆ ನನ್ನ ಸ್ಮರಣೆಯ ಪುಟದಿ ಚಿರ ನೆನಪು ನೀನು ಉಸಿರಿರುವವರೆಗೆ ನಾ ನಿನ ಮರೆವೆನೇನು? ದೀಪದಂತಿಹೆ ನೀನು ಭರತಮಾತೆಯ ಗುಡಿಗೆ ಶಿರ ಬಾಗಿ ನಮಿಸುವೆನು ಶಾಸ್ತ್ರಿ ನಿನ್ನಡಿಗೆ.